ಭಟ್ಕಳ: ತಾಲೂಕಿನ ಬೈಲೂರಿನ ಮಾರ್ಕಂಡೇಶ್ವರ ಗ್ರಾಮದ ರಸ್ತೆಯನ್ನು ಸಂಪೂರ್ಣ ಮಾಡಿಕೊಡಿ ಎಂದು ಕೇಳಿದ ಗ್ರಾಮಸ್ಥರೊಂದಿಗೆ ಶಾಸಕ ಸುನೀಲ ನಾಯ್ಕ ಅಸಭ್ಯವಾಗಿ ವರ್ತಿಸಿ ಗೂಂಡಾ ವರ್ತನೆಯನ್ನು ತೋರಿದ ಘಟನೆ ಮಂಗಳವಾರ ನಡೆದಿದೆ.
ತಾಲೂಕಿನ ಬೈಲೂರಿನ ಮಾರ್ಕೆಂಡೇಶ್ವರ ಗ್ರಾಮದಲ್ಲಿ ಮಂಗಳವಾರ ಶಾಸಕ ಸುನೀಲ ನಾಯ್ಕ ಭೂಮಿ ಪೂಜೆಗೆ ತೆರಳಿದ್ದಾರೆ. ಕಳೆದ ಹಲವು ವರ್ಷಗಳಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಇದರಿಂದ ಸ್ಥಳೀಯರು ಬೇಸತ್ತು ಹೋಗಿದ್ದರು.
ಭೂಮಿ ಪೂಜೆ ನಡೆಸುತ್ತಿದ್ದ ಶಾಸಕರ ಬಳಿ ತೆರಳಿದ ಸ್ಥಳೀಯರು 1.8 ಕಿ.ಮೀ ರಸ್ತೆಯನ್ನು ಸಂಪೂರ್ಣ ಮಾಡಿಕೊಡಿ, ಕಳೆದ ೫ ವರ್ಷಗಳಿಂದ ಅಲೆದು ಅಲೆದು ಸಾಕಾಗಿದೆ. ಅರ್ಧ ಮಾಡಿ ತೆರಳಿದರೆ ಮತ್ತೆ ಮುಂದಿನ ಚುನಾವಣೆ ವರೆಗೆ ನಮಗೆ ಆಗುವುದಿಲ್ಲ. ಹಾಗಾಗಿ ದಯವಿಟ್ಟು ಸಂಪೂರ್ಣವಾಗಿ ರಸ್ತೆಯನ್ನು ನಿರ್ಮಿಸಿಕೊಡಿ ಎಂದು ಕೇಳಿದ್ದಾರೆ.
ಇದರಿಂದ ಆಕ್ರೋಶಗೊಂಡ ಶಾಸಕ ಸುನೀಲ ನಾಯ್ಕ, ಇಲ್ಲ ನಾನು ಈ ಬಾರಿ ಕೇವಲ 400ಮೀ. ರಸ್ತೆ ಮಾತ್ರ ಮಾಡುವುದು, ತಾಕತ್ತಿದ್ದರೆ ರಸ್ತೆಯನ್ನು ನಿಲ್ಲಿಸಿ ಎಂದು ಸ್ಥಳೀಯರಿಗೆ ಆವಾಜ್ ಹಾಕಿದ್ದಾರೆ. ನಾನು ಶಾಸಕ ನನಗೆ ಏನು ಮಾಡಲು ಯಾವುದೇ ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ ಎಂದು ಗ್ರಾಮಸ್ಥರ ಬಳಿ ಅಸಭ್ಯವಾಗಿ ವರ್ತಿಸಿ ದರ್ಪ ಮೆರೆದಿದ್ದಾರೆ.
ಶಾಸಕರ ಈ ನಡೆಯನ್ನು ಕೆಲವು ಯುವಕರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಇನ್ನೊಂದೆಡೆ ಶಾಸಕರ ಈ ವರ್ತನೆಗೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.