ಸಿದ್ದಾಪುರ. ಯಕ್ಷಗಾನ, ನಾಟಕ ಮುಂತಾದವುಗಳು ಸಾಂಸ್ಕೃತಿಕವಾಗಿ ಜನರನ್ನು ಬೆಳೆಸುತ್ತವೆ. ಇಂತಹ ಪ್ರಯೋಗಗಳು ಮೇಲಿಂದ ಮೇಲೆ ನಡೆಯುತ್ತಿರಬೇಕು ಎಂದು ಖ್ಯಾತ ವಿದ್ವಾಂಸರಾದ ಡಾ ಜಿ. ಎಸ್. ಭಟ್ ಸಾಗರ ಹೇಳಿದರು.
ಅವರು ಪಟ್ಟಣದ ಶಂಕರ ಮಠದಲ್ಲಿ ಒಡ್ಡೋಲಗ ಹಿತ್ತಲಕೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ, ಬೆಂಗಳೂರು ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಹುಲಿಮನೆ ಸೀತಾರಾಮ ಶಾಸ್ತ್ರಿ ನೆನಪಿನ ಎರಡು ದಿನದ ನಾಟಕೋತ್ಸವವನ್ನು
ಸೋಮವಾರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪರಮೇಶ್ವರಯ್ಯ ಕಾನಳ್ಳಿಮಠ ಮಾತನಾಡಿ ಶರಣರ ಕುರಿತಾದಂತಹ ಪರಿಚಯಾತ್ಮಕ ಕಾರ್ಯಕ್ರಮಗಳು ಈ ಭಾಗದಲ್ಲಿ ಅಷ್ಟಾಗಿ ನಡೆಯುತ್ತಿಲ್ಲ. ಇಂದು ನಡೆಯುವ ಅಂತರಂಗ ಬಹಿರಂಗ ನಾಟಕ ಶರಣರ ಕುರಿತಾದ ನಾಟಕವಾಗಿದೆ. ಈ ಪ್ರಯೋಗ ಶ್ಲಾಘನೀಯವಾಗಿದೆ ಎಂದರು.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೇಪಥ್ಯ ಕಲಾವಿದ ಪುರುಷೋತ್ತಮ ತಲವಟ ಅವರಿಗೆ ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಹಾಗೂ ಗಣಪತಿ ಹೆಗಡೆ ಹಿತ್ತಲಕೈ ರಂಗ ಗೌರವ ಸಲ್ಲಿಸಿ ಸನ್ಮಾನಿಸಿದರು. ಒಡ್ಡೋಲಗ ದ ಗಣಪತಿ ಹಿತ್ಲಕೈ ಸ್ವಾಗತಿಸಿದರು. ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಂತರ ಚಂದ್ರು ಉಡುಪಿ ನಿರ್ದೇಶನದಲ್ಲಿ ಶ್ರೀ ಪಂಡಿತಾರಾಧ್ಯ ಶಿವಕುಮಾರ ಸ್ವಾಮಿಗಳು ಸಾಣೇಹಳ್ಳಿ ವಿರಚಿತ ಅಂತರಂಗ ಬಹಿರಂಗ ನಾಟಕವನ್ನು ಪ್ರಸ್ತುತ ಪಡಿಸಲಾಯಿತು. ನಾಟಕೋತ್ಸವದ ಎರಡನೆಯ ದಿನ ಅಕ್ಷತಾ ಪಾಂಡವಪುರ ರಚಿಸಿ ಅಭಿನಯಿಸಿದ ನಾಟಕ ಲೀಕ್ ಔಟ್ ಪ್ರೇಕ್ಷಕರ ಗಮನ ಸೆಳೆಯಿತು.