ಸಿದ್ದಾಪುರ:- ನಮ್ಮ ಸಮುದಾಯದ ರಾಜಕಾರಣಿಗಳಿಂದಲೇ ನಮಗೆ ಅನ್ಯಾಯವಾಗಿದೆ ಹೊರತು ಬೇರೆ ಯಾರಿಂದಲೂ ಅಲ್ಲ. ಉತ್ತರ ಕನ್ನಡ ಜಿಲ್ಲೆಯ ನಮ್ಮ ಸಮುದಾಯ ಕೂಡ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕಲಬುರಗಿಯ ಚಿತ್ತಾಪೂರದ ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ
ಯಾವುದೋ ಪಾದಪೂಜೆಯಲ್ಲೋ ಯಾವುದೋ ಮಠ ಕಟ್ಟುವಲ್ಲೊ ಮುಳುಗಿದ್ದೀರಿ ಅಂದರೆ ಸಮುದಾಯದ ಅಸ್ತಿತ್ವವೇ ಉಳಿಯುವುದಿಲ್ಲ. ಸಮುದಾಯಕ್ಕೆ ಒಂದು ಅಸ್ತಿತ್ವ ಇರಬೇಕಾಗುತ್ತದೆ. ಇಲ್ಲದಿದ್ದರೆ ನಾಳೆ ನಾವೆಲ್ಲ ಸಾಯುತ್ತೇವೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರಿ ಕಚೇರಿಗಳಲ್ಲಿ ನಾರಾಯಣ ಗುರುಗಳ ಜನ್ಮದಿನ ಆಚರಣೆಯ ಪ್ರಾರಂಭಿಸಿದರು.
ಅವರಿಗೆ ನಾವು ಅಭಿನಂದನೆಯನ್ನು ಸಲ್ಲಿಸುತ್ತೇವೆ. ಆದರೆ ಈ ಸರ್ಕಾರದ ಯಾವುದೇ ಒಂದು ಯೋಜನೆಯನ್ನು ಸಮುದಾಯಕ್ಕೆ ನೀಡಿಲ್ಲ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಯವರು ಉಡುಪಿ, ಕಾರವಾರ, ಶಿವಮೊಗ್ಗ, ಮಂಗಳೂರು ಗಳಲ್ಲಿ ನಾರಾಯಣ ಗುರುಗಳ ಹೆಸರಿನಲ್ಲಿ ವಸತಿ ಶಾಲೆಯನ್ನು ನಿರ್ಮಾಣ ಮಾಡಿದ್ದೇವೆ ಎಂದಿದ್ದಾರೆ. ಆದರೆ ಆ ವಸತಿ ಶಾಲೆಗಳಲ್ಲಿ ಈಡಿಗ ಬಿಲ್ಲವ ನಾಮಧಾರಿ ಸಮುದಾಯದ ಮಕ್ಕಳಿಗೆ ಯಾವುದೇ ರಿಸರ್ವೇಶನ್ ಇಲ್ಲ ಇದು ಯಾವ ಸೌಭಾಗ್ಯಕ್ಕೆ ಎಂದರು.
ಒಂದು ದಿನ ಕೂಲಿ ಮಾಡದೆ ಹೋದರೆ ನಮ್ಮ ಕುಟುಂಬಗಳು ಬದುಕು ನಡೆಸುವುದು ಕಷ್ಟವಾಗುತ್ತದೆ. ನಾವು ಮೀಸಲಾತಿಯಲ್ಲಿ ವಂಚಿತರಾಗುತ್ತಿದ್ದೇವೆ. ಕುಲಕಸುಬಿನಲ್ಲಿ ವಂಚಿತರಾಗಿದ್ದೇವೆ. ನಿಗಮ ಘೋಷಣೆ ಮಾಡುವುದರಲ್ಲಿ ವಂಚಿತರಾಗಿದ್ದೇವೆ. ಇದನ್ನೆಲ್ಲಾ ನೋಡಿದರೆ ಈ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಈ ಸಮಾಜವನ್ನು ಇಲ್ಲದಂತಾಗಿ ಮಾಡಿಸುವುದು ಬಸವರಾಜ್ ಬೊಮ್ಮಾಯಿ ಅವರ ಶೆಡ್ಯಂತರವಾಗಿದೆ ಎಂದು ಆರೋಪಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ನೇತೃತ್ವದಲ್ಲಿ ಈ ಹೋರಾಟ ನಡೆಯುತ್ತಿದೆ. ರಾಜ್ಯದಲ್ಲಿ ಇದಕ್ಕೆ ಬಹಳ ದೊಡ್ಡ ಕಮಿಟಿ ಇದೆ. ಸಮುಯದ ಹೆಸರಿನಲ್ಲಿ ಯಾವುದೇ ಹೋರಾಟ ಮಾಡುವುದು ಅವರ ಜನ್ಮಸಿದ್ಧ ಹಕ್ಕು. ಆ ಸಮುದಾಯದಲ್ಲಿ ಹುಟ್ಟಿರುವುದೇ ಅವರು ಆ ಸಮುದಾಯದ ಪರವಾಗಿ ಹೋರಾಟ ಮಾಡಲು ಹೊಂದಿರುವ ಹಕ್ಕು. ಯಾವುದಕ್ಕೂ ಯಾರು ಅವಕಾಶವನ್ನು ಕೊಡಬೇಕಾದ ಅವಶ್ಯಕತೆ ಇಲ್ಲ. ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ಎಂಬ ದೇಶ ಮಟ್ಟದ ಒಂದು ಸಂಘಟನೆ ಇದೆ. ಅದರ ರಾಷ್ಟ್ರೀಯ ಅಧ್ಯಕ್ಷರು ಕೂಡ ನಾನಾಗಿರುತ್ತೇನೆ ಎಂದು ಹೋರಾಟ ಮಾಡಲು ಯಾರು ಅಧಿಕಾರ ನೀಡಿದರು ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
ಈ ಸಮುದಾಯವನ್ನು ಕಟ್ಟಲು ಬೇರೆ ಯಾರು ಬೇಕಾಗಿಲ್ಲ. ಅದಕ್ಕೆ ನಾರಾಯಣ ಗುರುಗಳಾಗಲಿ, ಬೇರೆಯವರಾಗಲಿ ಹಕ್ಕನ್ನು ಕೊಡುವ ಅವಶ್ಯಕತೆ ಇಲ್ಲ .ನಮ್ಮ ಸಂವಿಧಾನಿಕವಾದ ಹಕ್ಕುಗಳನ್ನು ನಮ್ಮ ಸಮುದಾಯಕ್ಕೆ ಕೊಡಲೇಬೇಕಾಗುತ್ತದೆ ಯಾವುದೋ ಸ್ವಾಮೀಜಿಗಳ ಹಿಂದೆ ಜನ ಇದೆ, ಯಾವುದೋ ನಾಯಕರ ಹಿಂದೆ ನಮ್ಮ ಸಮುದಾಯ ಇದೆ ಎಂದು ಭಾವಿಸಿರುವುದು ಮುಖ್ಯಮಂತ್ರಿಗಳ ಒಂದು ತಪ್ಪು ಭಾವನೆಯಾಗಿದೆ ಅದು ಅವರ ಭ್ರಮೆ ಅಷ್ಟೇ.
ಯಾವ ಸ್ವಾಮಿಗಳ ಹಿಂದೆಯೂ ಸಮುದಾಯವಿಲ್ಲ. ಸಮುದಾಯಗಳು ಚಿದ್ರ ಚಿದ್ರವಾಗಿ ಹೋಗಿವೆ. ಹಾಗಾಗಿ ಆ ಸಮುದಾಯಗಳನ್ನು ಒಗ್ಗೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಸ್ವಾರ್ಥ ರಾಜಕಾರಣವಾಗಲಿ ಯಾವುದೇ ರೀತಿಯ ಪಕ್ಷ ಪಂಗಡವಾಗಲಿ ಇಲ್ಲ. ನಮ್ಮ ಮಕ್ಕಳ, ಮೊಮ್ಮಕ್ಕಳ ಭವಿಷ್ಯಕ್ಕಾಗಿ 6-1-2023 ರಿಂದ ಮಂಗಳೂರಿನಿಂದ ಬೆಂಗಳೂರಿನ ವರೆಗೆ 658 ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಂಡಿದ್ದು ಆ ಮೂಲಕ ಹೋರಾಟ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ಸಮುದಾಯದರು ಉಪಸ್ಥಿತರಿದ್ದರು.