ಅರಣ್ಯ ಅಧಿಕಾರಿಗಳ ಕ್ರೌರ್ಯ ಕಂಡಿಸಿ ಮನವಿ
ಸಿದ್ದಾಪುರ:- ಮರಾಠಿ ಸಮೂದಾಯದ ಅಮಾಯಕ ಮಹಾಬಲೇಶ್ ಮರಾಠಿಯವರ ಮೇಲೆ ಅರಣ್ಯಾಧಿಕಾರಿಗಳ ತಂಡದಿಂದ ಏಕಾಏಕಿ ದಾಳಿ ನಡೆಸಿ ಮನಬಂದಂತೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದ್ದಿದ್ದನ್ನು ಖಂಡಿಸಿ ಮಹಾಬಲೇಶ್ ಮರಾಠಿ ಸಹೋದರಿ ಹಾಗೂ ಸಮಾಜದ ಬಾಂಧವರು ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಅರಣ್ಯಾಧಿಕಾರಿಗಳು ಮರಾಠಿ ವಿರುದ್ಧ ತಲೆ ಬಾರವಾಗುವಷ್ಟು ಆರೋಪಗಳ ಪಟ್ಟಿಯನ್ನು ಸೃಷ್ಟಿಸಿ ತಲೆಗೆ ಕಟ್ಟಿ ಕೇಸ್ ದಾಖಲಿಸಿ ಜೈಲಿಗೆ ಕಳಿಸಿರುವುದು ನಮ್ಮ ಮರಾಠಿ ಸಮಾಜಕ್ಕೆ ಮಾಡಿದ ಅತ್ಯಂತ ನೋವಿನ ಸಂಗತಿಯಾಗಿದೆ.
ನಮ್ಮ ಮರಾಠಿ ಜನಾಂಗದ ಇಲ್ಲಿನ ಮೂಲ ನೆಲೆ ಬೆಳಗೋಡನಲ್ಲಿ ನಮ್ಮ ಅಜ್ಜಂದಿರ ಕಾಲದಿಂದಲೂ ಪಿತ್ರಾರ್ಜಿತವಾಗಿ ದೊರೆತ ಆಸ್ತಿ ಹೊರತುಪಡಿಸಿ ಯಾವುದೇ ಅಕ್ರಮ ಆಸ್ತಿ ಹೊಂದಿರುವುದಿಲ್ಲ.
ಮಹಾಬಲೇಶ್ ಮರಾಠಿಯವರು ಚಂದ್ರಗುತ್ತಿಯ ಯೋಗೀಶ್ವರ ಜೋಗಿ ಮಠದ ಸೇವಕರಾಗಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದಿರುತ್ತಾರೆ. ಅವರು ತಮ್ಮ ಮೂಲ ಮನೆಯಿಂದ ಹೊರಗೆ ಬಂದ ನಂತರ 94 ಸಿ ಅಡಿಯಲ್ಲಿ ಜಾಗದ ಕುರಿತು ಅರ್ಜಿ ಸಹ ಹಾಕಿರುತ್ತಾರೆ. ಕಳೆದ ಒಂದು ವರ್ಷದ ಹಿಂದೆ ಆ ಸ್ಥಳದಲ್ಲಿ ಮನೆ ನಿರ್ಮಿಸಲಾಗಿತ್ತು. ಆದರೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಕ್ರೌರ್ಯ ಮೆರೆದಿರುವುದು ಖಂಡನೀಯ.ನಮ್ಮ ಸಮಾಜದ ವ್ಯಕ್ತಿಯಾದ ಮಹಾಬಲೇಶ್ ಮರಾಠಿಯವರ ವಿರುದ್ಧ ಅರಣ್ಯಾಧಿಕಾರಿಗಳು ನಡೆಸಿದ ಕ್ರೌರ್ಯ ಹಾಗೂ ತೆಗೆದುಕೊಂಡಿರುವ ಕಠಿಣ ಕ್ರಮಗಳನ್ನು ಪರಿಶೀಲಿಸಿ ಅವರ ಮೇಲೆ ಇರುವ ಆರೋಪಗಳನ್ನು ದೂರ ಸರಿಸಿ ನ್ಯಾಯ ಒದಗಿಸಿ ಕೊಡಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜೋಗಿ ಅಭಿವೃದ್ಧಿ ಮಹಾಮಂಡಲದ ಪತ್ರಿಕೆ ವರದಿಗಾರ ಹಾಗೂ ಚಂದ್ರಗುತ್ತಿ ಯೋಗಿಶ್ವರ ಜೋಗಿ ಮಠದ ಸಂಘಟನ ಕಾರ್ಯದರ್ಶಿ ಶಿವಕುಮಾರ ಜಿ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.