ಎನ್ ಆರ್ ಎಲ್ ಎಂ ಯೋಜನೆಯ ಸಂಜೀವಿನಿ ಯೋಜನೆ ಅಡಿಯಲ್ಲಿ ಸ್ವಸಹಾಯ ಸಂಘಗಳಿಗೆ ನೀಡುವ ಹಣವು ದುರುಪಯೋಗವಾಗಿದೆ:ವಿ ಎನ್ ನಾಯ್ಕ ಬೇಡ್ಕಣಿ ಆಗ್ರಹ

ಸಿದ್ದಾಪುರ:- ಕೇಂದ್ರ ಸರ್ಕಾರದ ಎನ್ ಆರ್ ಎಲ್ ಎಂ ಯೋಜನೆಯ ಸಂಜೀವಿನಿ ಯೋಜನೆ ಅಡಿಯಲ್ಲಿ ಸ್ವಸಹಾಯ ಸಂಘಗಳಿಗೆ ನೀಡುವ ಹಣವು ದುರುಪಯೋಗವಾಗಿದೆ. ಇದರಿಂದ ತಾಲೂಕಿನ ಏಳು ಗ್ರಾಮ ಪಂಚಾಯತದ 13 ಸ್ವ ಸಹಾಯ ಸಂಘ ಗಳ 75 ಲಕ್ಷ ರೂಪಾಯಿ ದುರುಪಯೋಗವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಸ್ವ-ಸಹಾಯ ಸಂಘಗಳಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್‌ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ವಿ ಎನ್ ನಾಯ್ಕ ಬೇಡ್ಕಣಿ ಆಗ್ರಹಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮನು ಎಂಟರ್ಪ್ರೈಸಸ್ ಮಾಲೀಕರಾದ ಪ್ರಭು ದೊಡ್ಮನೆ ಅವರು ತಾಲೂಕು ಪಂಚಾಯಿತಿ ಮುಖಾಂತರ ಒಡಂಬಡಿಕೆಯ ಮಾಡಿಕೊಂಡ ಪ್ರಕಾರ ಸಂಘಗಳಿಗೆ ಸ್ವ ಉದ್ಯೋಗವನ್ನು ಪ್ರಾರಂಭಿಸಲು ಬೇಕಾದ ಮಿಷಿನರಿ ಹಾಗೂ ಕಚ್ಚಾವಸ್ತುಗಳನ್ನು ಪೂರೈಸಲು ಸಂಘಗಳಿಂದ ಹಣವನ್ನು ಪಡೆದಿದ್ದಾರೆ. ಆದರೆ ಇಲ್ಲಿಯ ವರೆಗೂ ಬೇಕಾದ ಮಿಷಿನರಿ ಹಾಗೂ ಕಚ್ಚಾವಸ್ತುಗಳನ್ನು ಪೂರೈಸಲಿಲ್ಲ. ಇದರಿಂದ ಸ್ವಸಹಾಯ ಸಂಘಗಳ ಸದಸ್ಯರು ಕಂಗಾಲಾಗಿದ್ದಾರೆ. ಆದರೆ ಸ್ವ ಸಹಾಯ ಸಂಘಗಳ ತಾಲೂಕಿನ ಮೇಲ್ವಿಚಾರಕರಾಗಲಿ ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವಹಿಸದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕೂಡಲೇ ಸಂಬಂಧಪಟ್ಟವರು ಕ್ರಮವಹಿಸಿ ಸ್ವ ಸಹಾಯ ಸಂಘಗಳಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ನಮ್ಮ ಪಕ್ಷದ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಸರ್ಕಾರದ ಇಲಾಖೆಯ ಎಲ್ಲಾ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಬೀದಿ ನಾಟಕ ಕಲಾತಂಡಗಳು ಸಮರ್ಪಕವಾಗಿ ನಿರ್ವಹಿಸುತ್ತಿದ್ದವು. ಹಿಂದಿನ ಎಲ್ಲ ಸರ್ಕಾರಗಳು ಕಲಾತಂಡಗಳ ಕಲಾವಿದರಿಗೆ ಗೌರವಧನವನ್ನು ನೀಡಿ ಯೋಜನೆಗಳ ಪ್ರಚಾರವನ್ನು ಮಾಡುತ್ತಿತ್ತು. ಆದರೆ ಈ ಸರ್ಕಾರ ನಾಲ್ಕು ಕೋಟಿ ರೂಪಾಯಿ ಅನುದಾನವನ್ನು ಇದಕ್ಕಾಗಿ ಮೀಸಲಿಟ್ಟಿದ್ದರು ಸಹ ಬಳಕೆ ಮಾಡದೆ ಕಲಾವಿದರ ಜೀವನದ ಜೊತೆ ಆಟವಾಡುತ್ತಿದೆ. ಎಷ್ಟೋ ಕಲಾವಿದರು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಸರಕಾರ ಕಲಾವಿದರನ್ನು ಪೋಷಿಸುವ ಕೆಲಸವನ್ನು ಮಾಡಬೇಕು. ಮೀಸಲಿಟ್ಟ ಹಣವನ್ನು ಅದಕ್ಕೆ ಉಪಯೋಗ ಮಾಡಬೇಕು. ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಕಳೆದ ಮೂರು ಚುನಾವಣೆಗಳಿಂದ ತಾನು ಶಿರಸಿ ಕ್ಷೇತ್ರದ ಕಾಂಗ್ರೆಸ್‌ ಟಿಕೇಟ್‌ ಆಕಾಂಕ್ಷಿಯಾಗಿರುವುದು ಸತ್ಯ ಆದರೆ ಅದಕ್ಕಾಗಿ ಎಲ್ಲಿಯೂ ಲಾಭಿ ಮಾಡಿಲ್ಲ,ಕಾಂಗ್ರೆಸ್‌ ಪ್ರಮುಖರಿಗೆ ತನ್ನ ಬಗ್ಗೆ ಸಂಪೂರ್ಣ ಮಾಹಿತಿ ಇರುವುದರಿಂದ ಅಂತಹ ಲಾಭಿ ಮಾಡುವ ಅಗತ್ಯವೂ ಇಲ್ಲ. ಕಾಂಗ್ರೆಸ್‌ ತಮಗೆ ಅವಕಾಶ ಕೊಟ್ಟಾಗಲೂ, ಕೊಡದಿದ್ದಾಗಲೂ ಪಕ್ಷದ ಪರವಾಗಿ ಕೆಲಸ ಮಾಡಿದ್ದೇವೆ ಈಗಲೂ ಅದಕ್ಕೆ ತಾವು ಬದ್ದ ಎಂದರು.

ನಾಸೀರ್ ಖಾನ್, ಸಾವೇರ್ ಡಿ ಸಿಲ್ವ, ರಾಮಕೃಷ್ಣ ನಾಯ್ಕ, ಗಾಂಧಿ ಜಿ ನಾಯ್ಕ, ಗಂಗಾಧರ ಮಡಿವಾಳ, ಲಂಭೋಧರ ಹೆಗಡೆ, ಪದ್ಮಾಕರ ನಾಯ್ಕ, ಶಾಂತಲಾ ನಾಯ್ಕ ಮೊದಲಾದರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top