ಜನತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ 2.03 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇರುದಾರರಿಗೆ ಶೇ.8ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಂಕಾಳ ಎಸ್ ವೈದ್ಯ ಹೇಳಿದರು.
ಪಟ್ಟಣದ ಗೋಪಾಲಕೃಷ್ಣ ಸಭಾಭವನದಲ್ಲಿ ಏರ್ಪಡಿಸಲಾದ ಜನತಾ ಸೊಸೈಟಿಯ 37ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸೊಸೈಟಿಯಲ್ಲಿ ವರದಿ ಸಾಲಿನ ಅಂತ್ಯಕ್ಕೆ 8.8 ಕೋಟಿ ಶೇರು ಬಂಡವಾಳ, 141.77ಕೋಟಿ ಠೇವಣಿ, ೧೬೫ ಕೋಟಿ ಸಾಲ, 12.57ಕೋಟಿ ನಿಧಿಗಳು, 17.40 ಕೋಟಿ ವಿವಿಧ ಬ್ಯಾಂಕಿನಲ್ಲಿ ವಿನಿಯೋಗ ಮಾಡಲಾಗಿದೆ. ಸೊಸೈಟಿ ಪ್ರಧಾನ ಕಚೇರಿ ಸೇರಿ ಜಿಲ್ಲೆಯಲ್ಲಿ 12 ಶಾಖೆಗಳನ್ನು ಹೊಂದಿದ್ದು, ಗ್ರಾಹಕರ ವಿಶ್ವಾಸಗಳಿಸಿ ಸೊಸೈಟಿ ಉತ್ತಮ ವ್ಯವಹಾರ ನಡೆಸುತ್ತಿದೆ. ಪಡೆದ ಸಾಲವನ್ನು ಅವಧಿಗೆ ಸರಿಯಾಗಿ ಪಾವತಿಸಿದರೆ ಸೊಸೈಟಿಯ ಮತ್ತಷ್ಟು ಪ್ರಗತಿಗೆ ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಗಣಪತಿ ನಾಯ್ಕ, ಎಸ್ ಬಿ ಬೊಮ್ಮಾಯಿ, ವಿಷ್ಣು ನಾಯ್ಕ, ಮಂಜುನಾಥ ಶೆಟ್ಟಿ, ಶಂಕರ ಶೆಟ್ಟಿ ಮುಂತಾದವರು ಕೆಲವು ವಿಚಾರಗಳ ಬಗ್ಗೆ ಮಾತನಾಡಿ ಇದನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಬೇಕೆಂದರು. ಶೇರುದಾರ ಸದಸ್ಯರ ಪ್ರಶ್ನೆಗೆ ಅಧ್ಯಕ್ಷರು ಉತ್ತರಿಸಿದರು.
ಪ್ರಭಾರೆ ಪ್ರಧಾನ ವ್ಯವಸ್ಥಾಪಕ ನಾಗೇಶ ಎಂ ದೇವಡಿಗ ವರದಿ ಮಂಡಿಸಿದರು. ಉಪಾಧ್ಯಕ್ಷ ಪರಮೇಶ್ವರ ದೇವಡಿಗ ಸ್ವಾಗತಿಸಿದರು. ಸಭೆಯಲ್ಲಿ ನಿರ್ದೇಶಕರಾದ ನಾಗಪ್ಪ ನಾಯ್ಕ, ಕೃಷ್ಣಾ ನಾಯ್ಕ, ಕೃಷ್ಣಾನಂದ ಪೈ, ಬಾಬುರಾಯ ಕುಬಾಲ, ತಿಮ್ಮಣ್ಣ ನಾಯ್ಕ, ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ, ತಿಮ್ಮಪ್ಪ ನಾಯ್ಕ, ಗೊಯ್ದ ಗೊಂಡ, ರಾಮಚಂದ್ರ ಕಿಣಿ, ಗೀತಾ ನಾಯ್ಕ ಉಪಸ್ಥಿತರಿದ್ದರು.