ಜನ ಸಾಮಾನ್ಯರಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಸಂತ ನಾಯ್ಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಮಾರುತಿ ನಾಯ್ಕ ಆರೋಪ
ಸಿದ್ದಾಪುರ: ಬಡವರು ಊಟ ಮಾಡುವ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಕ್ಸ್ ಎಂದು ಗೊಂದಲ ಸೃಷ್ಟಿಸುತ್ತಿರುವ ಕಾಂಗ್ರೆಸ್ ಬಡವರು ಅನ್ನಕ್ಕೂ ಕಲ್ಲು ಹಾಕಲು ಮುಂದಾಗಿದೆ. ಪ್ಲಾಸ್ಟಿಕ್ ಅಕ್ಕಿ ಅಲ್ಲ ಇಲಾಖೆಯಿಂದ ನೀಡುತ್ತಿರುವ ಸಾರವರ್ಧಿತ ಅಕ್ಕಿ ಎಂದು ಸಂಬಂಧಪಟ್ಟ ಆಹಾರ ಇಲಾಖೆಯವರೇ ಸ್ಪಷ್ಟ ಪಡಿಸಿದ್ದು ವಿನಾಕಾರಣ ಪ್ಲಾಸ್ಟಿಕ್ ಅಕ್ಕಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಗೊಂದಲ ಸೃಷ್ಟಿಸಿ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಪಟ್ಟಣ ಪಂಚಾಯತ ಸದಸ್ಯ ಮಾರುತಿ ನಾಯ್ಕ ಆರೋಪಿಸಿದರು.
ಅವರು ಪಟ್ಟಣದ ಗಂಗಾಂಬಿಕಾ ದೇವಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,
ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಡಿಪೋ ಮ್ಯಾನೇಜರ್ ಬಳಿ ಮಾತನಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಬಸ್ಸಿನ ಸಮಸ್ಯೆ ಬಗೆಹರಿಸಿ ಬಸ್ ಬಿಡುವುದು ಗೊತ್ತಾದ ಮೇಲೆಯು ಕೂಡಾ ಪ್ರತಿಭಟನೆ ನಡೆಸಿದ್ದಾರೆ. ಪದವಿ ಕಾಲೇಜಿನ ಮಕ್ಕಳಿಗೆ ಬಸ್ ನಿಲ್ದಾಣ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಇದೆಲ್ಲಾ ಗೊತ್ತಾದ ಮೇಲೆ ಪ್ರತಿಭಟನೆ ಮಾಡಿ ತಮ್ಮಿಂದಲೇ ಸಮಸ್ಯೆ ಬಗೆಹರಿದಿದೆ ಎಂದು ಪ್ರಚಾರ ಪಡೆಯುತ್ತಿದ್ದಾರೆ ಎಂದು ಹೇಳಿದರು
ಬಿಜೆಪಿ ಮುಖಂಡ ತಿಮ್ಮಪ್ಪ ಎಂ.ಕೆ ಮಾತನಾಡಿ, ಪ್ರವೀಣ ಹತ್ಯೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡಿರುವುದನ್ನು ಸ್ವಾಗತಿಸುತ್ತೇವೆ. ತಾಲೂಕಿನ ಹೊಸಳ್ಳಿಯ ದೇವಸ್ಥಾನ ಸಮಿತಿ ಅಧ್ಯಕ್ಷ ಸಿದ್ದು ಮಡಿವಾಳ ಎಂಬುವರ ಮೇಲೆ ಕೆಲವು ಮುಸ್ಲಿಮರು ಹಲ್ಲೆ ನಡೆಸಿದಾಗ ಅಂದು ಇವರಿಗೆ ಹಿಂದುಗಳ ಬಗ್ಗೆ ಕಾಳಜಿ ಇರಲಿಲ್ಲವಾ? ಮಾರ್ಚ್ ೧೯ ರಂದು ನಡೆದ ಗಲಾಟೆಗೆ ಸಂಬಂಧಿಸಿ ಮಾರ್ಚ್ ೨೧ ರಂದು ಆರೋಪಿಗಳ ಪರವಾಗಿ ನಿಂತು ಮಾತನಾಡಿದ್ದಾರೆ. ವಸಂತ ನಾಯ್ಕ ತಾಲೂಕಿನಲ್ಲಿ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಗುರುರಾಜ ಶಾನಭಾಗ, ನಂದನ ಬೋರಕರ್, ನಾಮನಿರ್ದೇಶಿತ ಸದಸ್ಯರಾದ ಸುರೇಶ ನಾಯ್ಕ, ಮಂಜುನಾಥ ಭಟ್, ಪ್ರಮುಖರಾದ ರಾಘವೇಂದ್ರ ಶಾಸ್ತ್ರಿ, ತೋಟಪ್ಪ ನಾಯ್ಕ, ಕೃಷ್ಣಮೂರ್ತಿ ನಾಯ್ಕ, ಅಣ್ಣಪ್ಪ ನಾಯ್ಕ, ರೋಹಿದಾಸ ಮಡಿವಾಳ, ವಿಜೇತ ಗೌಡರ್ ಮೊದಲಾದವರು ಉಪಸ್ಥಿತರಿದ್ದರು.
ವರದಿ ಸುರೇಶ ನಾಯ್ಕ ಸಿದ್ದಾಪುರ