ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರ; ಬಿಜೆಪಿಗೆ ಹೊಸ ಅಸ್ತ್ರ! ಗೊಂದಲದಲ್ಲಿ ಕಾಂಗ್ರೆಸ್

ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರ ಇದೀಗ ಹೊಸ ಚರ್ಚೆಯನ್ನು ರಾಜ್ಯದಲ್ಲಿ ಹುಟ್ಟುಹಾಕಿದೆ. ಬಿಜೆಪಿ ಪಾಲಿಗೆ ಇದು ಹೊಸತೊಂದು ರಾಜಕೀಯ ಅಸ್ತ್ರವಾದರೆ ಕಾಂಗ್ರೆಸ್‌ ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು ಎಂಬ ಗೊಂದಲದಲ್ಲಿ ಇದೆ.

ಬೆಂಗಳೂರು: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ಚರ್ಚೆಗಳು ಶುರುವಾಗಿದ್ದು ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಗುಜರಾತ್‌ನಲ್ಲಿ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಚಿಂತನೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯದಲ್ಲೂ ಇದನ್ನು ನೈತಿಕ ಶಿಕ್ಷಣ ಸ್ವರೂಪದಲ್ಲಿ ಪಠ್ಯದಲ್ಲಿ ಸೇರ್ಪಡೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ನಡುವೆ ಇದು ಪರ ವಿರೋಧ ಅಭಿಪ್ರಾಯಕ್ಕೆ ಕಾರಣವಾಗಿದ್ದು ಬಿಜೆಪಿಗೆ ಹೊಸ ರಾಜಕೀಯ ಅಸ್ತ್ರ ಸಿಕ್ಕರೆ, ಕಾಂಗ್ರೆಸ್‌ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಬಿಜೆಪಿ  ವಾದ ಏನು?

ಪಠ್ಯ ಪುಸ್ತಕದಲ್ಲಿ ನೈತಿಕ ಶಿಕ್ಷಣವನ್ನು ಸೇರಿಸಿ ಎಂಬ ಬೇಡಿಕೆ ದೇಶದಲ್ಲೇ ಇದೆ. ಗುಜರಾತ್ ನಲ್ಲಿ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಸೇರ್ಪಡೆ ಮಾಡುವ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡುತ್ತೇವೆ. ಈ ಹಿಂದೆ ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಅವರು ಕೂಡ ಭಗವದ್ಗೀತೆ‌ ಓದುತ್ತಿದ್ದರಂತೆ. ಪ್ರತಿ ರಾತ್ರಿ ಭಗವದ್ಗೀತೆ ಓದುತ್ತಿದ್ದೇ ಅವರ ಶಕ್ತಿ ಅಂತಾ ಹೇಳುತ್ತಿದ್ದರು.ಮಹಾತ್ಮ ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.

ನನ್ನ ತಾಯಿ ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಹೇಳಿಕೊಟ್ಟಿದ್ದೇ‌ ನಾನು ಸತ್ಯವಂತನಾಗಿದ್ದು ಎಂದಿದ್ದಾರೆ. ಯೌವ್ವನದಲ್ಲಿ ಸತ್ಯ ಹರಿಶ್ಚಂದ್ರರ ನಾಟಕ ನೋಡಿದ್ದಕ್ಕೆ ನಾನು ಸತ್ಯವಂತನಾಗಿದ್ದು ಎಂದಿದ್ದಾರೆ. ಹೀಗಾಗಿ ಮಾರಲ್ ಸೈನ್ಸ್ ಅಳವಡಿಸುವುದರ ಬಗ್ಗೆ ಚರ್ಚಿಸುತ್ತೇವೆ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಗುಜರಾತ್ ಮಾದರಿಯಲ್ಲಿ ಕರ್ನಾಟಕದ ಪಠ್ಯದಲ್ಲಿ “ಭಗವದ್ಗೀತೆ” ಅಳವಡಿಸಲು ಚಿಂತಿಸಲಾಗುತ್ತಿದೆ. ಇದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅಲೆ ಸೃಷ್ಟಿಸಲಿದೆ. ಇತಿಹಾಸವನನ್ನು ಪಠ್ಯದಲ್ಲಿ ಅಳವಡಿಸುವುದರಲ್ಲಿ ತಪ್ಪೇನಿಲ್ಲ, ಇದರಿಂದ ಕೆಲವರಿಗೆ ಮುಜುಗರ ಆಗಬಹುದು, ಹಾಗಂತ ನಮ್ಮ ಬಿಜೆಪಿ ಸರ್ಕಾರ ಹಿಂದೇಟು ಹಾಕಲ್ಲ ಎಂದು ಹೇಳಿದ್ದಾರೆ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ.

ಕಾಂಗ್ರೆಸ್ ವಾದ ಏನು?

ಎಲ್ಲವನ್ನು ತಿಳಿದವರು ಸೇರಿಕೊಂಡು ಶಾಲಾ ಪಠ್ಯ ಕ್ರಮ ರಚನೆ ಮಾಡಿದ್ದಾರೆ. ಇದೀಗ ಹೊಸತಾಗಿ ಏನನ್ನೂ ಸೇರಿಸುವ ಅವಶ್ಯಕತೆ ಇಲ್ಲ.ಎಲ್ಲಾ ಧರ್ಮದ ಆಚಾರ ವಿಚಾರಗಳನ್ನು ಜನ ತಿಳಿದುಕೊಳ್ಳುವುದರಲ್ಲಿ ತಪ್ಪಿಲ್ಲ.ಈಗಾಗಲೇ ಭಗವದ್ಗೀತೆ, ರಾಮಾಯಣ, ಇತರ ಧರ್ಮದ ವಿಚಾರಗಳು ಪಠ್ಯದಲ್ಲಿ ಇವೆ. ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಎರಡು ರುಪಾಯಿಗೆ ಭಗವದ್ಗೀತೆ ಪುಸ್ತಕ ಕೊಟ್ಟಿದ್ದರು.ಈಗ ಇವರು ಹೊಸತಾಗಿ ಕ್ರೆಡಿಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್.

ಶಿಕ್ಷಣ ವ್ಯವಸ್ಥೆ ಬದಲಾಯಿಸಲು ಹೋಗಬೇಡಿ. ಮಕ್ಕಳು ಈಗಾಗಲೇ ಕೊರೊನಾ ಪರಿಣಾಮ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ಅವರಿಗೆ ಗುಣಮಟ್ಟದ ಶಿಕ್ಷಣ ಕೊಡುವ ಬಗ್ಗೆ ಗಮನ ಹರಿಸಿ. ಶಾಲಾ ಕಟ್ಟಡಗಳ ಸುವ್ಯವಸ್ಥೆ ಬಗ್ಗೆ ಗಮನ ಕೊಡಿ. ಹೈಕಮಾಂಡ್ ಮನವೋಲಿಕೆ ಮಾಡಲು ಇಂತಹಾ ಕ್ರಮಗಳನ್ನು ತರಲು ಹೋಗಬೇಡಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಈ ವಿಚಾರವಾಗಿ ಕಾಂಗ್ರೆಸ್‌ನ ಇತರ ನಾಯಕರು ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ. ಸರ್ಕಾರದ ನಿಲುವಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು ಎಂಬ ಗೊಂದಲ ಕಾಂಗ್ರೆಸ್ ನಾಯಕರಲ್ಲಿ ಎದ್ದು ಕಾಣುತ್ತಿದೆ.

ಒಟ್ಟಿನಲ್ಲಿ ಪಠ್ಯದಲ್ಲಿ ಭಗವದ್ಗೀತೆ ವಿಚಾರ ರಾಜ್ಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಈ ಚರ್ಚೆ ಮತ್ತಷ್ಟು ತೀವ್ರಗೊಳ್ಳುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಸಿಎಫ್‌ಐ ನಂತಹ ಮುಸ್ಲಿಂ ಸಂಘಟನೆ ಕೂಡಾ ಸರ್ಕಾರದ ಈ ಚಿಂತನೆಯನ್ನು ವಿರೋಧಿಸಿದೆ. ಈ ನಿಟ್ಟಿನಲ್ಲಿ ಇದೊಂದು ರಾಜಕೀಯ ಆಯಾಮವನ್ನು ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.

WhatsApp
Facebook
Telegram
error: Content is protected !!
Scroll to Top