ಕಾರವಾರದಲ್ಲಿ ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ತಯಾರಿ ನಡೆಯುತ್ತಿದ್ದ ಬೆನ್ನಲ್ಲೇ, ಅರ್ಜುನ್ ಚಿತ್ರಮಂದಿರದ ಬಳಿ ಆಗಮಿಸಿದ ಸ್ಫೂರ್ತಿ ಸೇವಾ ಎಂಬ ಮಹಿಳಾ ಸಂಘಟನೆಯ ಸದಸ್ಯರು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನ ಮೊದಲು ಪ್ರದರ್ಶಿಸುವಂತೆ ಒತ್ತಾಯಿಸಿದ ಘಟನೆ ನಡೆದಿದೆ.
ಕಾಶ್ಮೀರದಲ್ಲಿ ಹಿಂದೂ ಪಂಡಿತರ ಮೇಲೆ ನಡೆದಿದ್ದ ಹಿಂಸಾಚಾರದ ಕುರಿತು ನಿರ್ಮಿಸಲಾಗಿರುವ ‘ಕಾಶ್ಮೀರ್ ಫೈಲ್ಸ್’ ಚಿತ್ರ ದೇಶದಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಆದರೆ ಕಾರವಾರದಲ್ಲಿ ಮಾತ್ರ ಇದುವರೆಗೂ ಈ ಚಿತ್ರವನ್ನು ಪ್ರದರ್ಶಿಸದಿರುವುದಕ್ಕೆ ಸ್ಪುರ್ತಿ ಸೇವಾ ಸಂಘಟನೆ ಸದಸ್ಯರು ಆಕ್ರೋಶ ಹೊರಹಾಕಿದರು.
ದೇಶದಲ್ಲಿ ನಡೆದಿದ್ದ ಮಹತ್ತರ ಘಟನೆಯೊಂದರ ಕುರಿತು ಎಲ್ಲರೂ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದ್ದು, ಅಂತಹ ಚಿತ್ರವನ್ನ ಪ್ರದರ್ಶನ ಮಾಡದ ನಿಮಗೆ ಸಾಮಾಜಿಕ ಜವಾಬ್ದಾರಿ ಇಲ್ಲವೇ ಎಂದು ಮಹಿಳೆಯರು ಪ್ರಶ್ನಿಸಿದರು. ಅಲ್ಲದೇ ‘ದಿ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶನ ಮಾಡದಿದ್ದರೆ, ಚಿತ್ರಮಂದಿರದೊಳಕ್ಕೆ ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.