ಬೆಂಗಳೂರು: ಹಿಜಾಬ್ ವಿವಾದದ ಕುರಿತಾಗಿ ನ್ಯಾಯಾಲಯ ತೀರ್ಪು ಒಪ್ಪದೆ ನೆಲದ ಕಾನೂನನ್ನು ಗೌರವಿಸದೆ ಕರ್ನಾಟಕ ಬಂದ್ ನಡೆಸಿದ್ದಾರೆ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಆರೋಪಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ನೆಲದ ಕಾನೂನನ್ನು ಗೌರವಿಸದೆ ಬಂದ್ ಗೆ ಕರೆ ಕೊಡುತ್ತಾರೆ ಎಂದರೆ, ಈ ದೇಶವನ್ನು ಪಾಕಿಸ್ತಾನ ಅಂದುಕೊಂಡಿದ್ದಾರೆ. ಇದು ಕರ್ನಾಟಕ, ಭಾರತ ಇಲ್ಲಿ ಅದೆಲ್ಲಾ ನಡೆಯಲ್ಲ ಎಂದರು.
ಈ ನೆಲದ ಕಾನೂನನ್ನು ಗೌರವಿಸಬೇಕು. ಕಾನೂನನ್ನು ಗೌರವಿಸದೆ ಇದ್ದರೆ. ಈ ದೇಶದ ನೆಲದಲ್ಲಿ ವಾಸವಿರಲು ನಾಲಾಯಕ್ ಎಂದು ವಾಗ್ದಾಳಿ ನಡೆಸಿದರು. ಈ ದೇಶದ ಕಾನೂನಿನ ವಿರುದ್ಧವಾಗಿ ಬಂದ್ ಗೆ ಕರೆ ಕೊಡುತ್ತೀರಾ? ವಿದ್ಯಾರ್ಥಿಗಳ ಮೇಲೆ ಪ್ರಚೋದನೆ ಮಾಡುತ್ತೀರಾ? ವಿದ್ಯಾರ್ಥಿಗಳ ಭವಿಷ್ಯ ಹಾಳಾದರೆ ಅದಕ್ಕೆ ಕಾಣದ ಕೈಗಳ ಕಾರಣ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ವಿಧಾನಸಭೆ ಸಚಿವಾಲಯದಿಂದ ಆಯೋಜಿಸಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾ ಪ್ರದರ್ಶನಕ್ಕೆ ಗೈರಾದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರ ವಿರುದ್ಧ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಕೆಂಡಾಮಂಡಲರಾದರು. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆ ಮಾಡುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದ ಎಲ್ಲ ಸದಸ್ಯರಿಗೆ ಆಹ್ವಾನ ನೀಡಿದ್ದರು. ನಗರದ ಮಂತ್ರಿ ಮಾಲ್ ನಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಾಂಗ್ರೆಸ್ ಸದಸ್ಯರು ಗೈರಾಗಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ, ಸಿನಿಮಾ ನೋಡಲು ಸ್ಪೀಕರ್ ಕರೆದರೂ ಕಾಂಗ್ರೆಸ್ ನವರು ಬರಲಿಲ್ಲ ಎಂದು ಗರಂ ಆದರು.
ಇನ್ನು ವಿಧಾನಸಭೆ ಮೊಗಸಾಲೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಡಾ. ಅಶ್ವತ್ಥ ನಾರಾಯಣ ಗಲಾಟೆ ಸುದ್ದಿ ವಿಚಾರವಾಗಿ, ಅವರು ಕಚ್ಚಾಡಲಿಲ್ಲ. ಅಂತಹ ಯಾವುದೇ ಘಟನೆ ನಡೆಯಲಿಲ್ಲ. ಸಂಘರ್ಷ ನಡೆಸಿಲ್ಲ ಬದಲಾಗಿ ಸಾಮರಸ್ಯದಿಂದ ಮಾತಾಡಿದರು ಎಂದು ಸಮಜಾಯಿಷಿ ನೀಡಿದರು.