ದಕ್ಷಿಣಕನ್ನಡ(ಪುತ್ತೂರು): ಪುತ್ತೂರಿನ ಯುವ ಬಿಜೆಪಿ ನಾಯಕ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ ಈಶ್ವರಮಂಗಲ ಅವರಿಗೆ ಫೋನ್ ಕರೆಯೊಂದರಲ್ಲಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿನ್ನೆಯ ದಿನ ಚಂದ್ರಹಾಸ ಅವರು ಹಿಜಾಬ್ ವಿಷಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇದರಿಂದ ಕುಪಿತಗೊಂಡ ಕೆಲ ದುಷ್ಕರ್ಮಿಗಳು ಇಂದು ಫೋನ್ ಕರೆ ಮಾಡಿದ್ದಾರೆ.
ಮೊದಲಿಗೆ ದನದ ಮಾಂಸ ಇದೆಯಾ, ಎಷ್ಟು ರೇಟ್ ಎಂದೆಲ್ಲಾ ಕೇಳಿದ ಕರೆಮಾಡಿದ ಅನಾಮಧೇಯ ವ್ಯಕ್ತಿ ಆ ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಾಳೆ ಸಂಜೆಯ ಒಳಗಾಗಿ ಶರತ್ ಮಡಿವಾಳನನ್ನು ಕೊಂದ ರೀತಿಯಲ್ಲೇ ಬರ್ಬರವಾಗಿ ಹತ್ಯೆ ನಡೆಸುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಯಾರೋ ಸ್ಥಳೀಯ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಹಾಗೂ ಇದರ ಹಿಂದೆ ಕಾಣದ ಕೈಯೊಂದು ಕೆಲಸ ನಿರ್ವಹಿಸಿರಬಹುದು ಎಂದು ಶಂಕಿಸಲಾಗಿದ್ದು ಪೊಲೀಸರ ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ.