ಆಂಧ್ರ ಪ್ರದೇಶ: ಆ ಮನೆಯಲ್ಲಿ ಇರುವುದು ಅವರಿಬ್ಬರೇ, ತಾಯಿ (Mother) ಮತ್ತು 10 ವರ್ಷದ ಪುಟ್ಟ ಮಗ (Son). ಪುಟ್ಟ ಮಗ ಪ್ರತಿ ದಿನ ಶಾಲೆಗೆ (School) ಹೋಗಿ ಬರುತ್ತಾ ಇದ್ದ. ಅಮ್ಮ ಮಲಗಿದವಳು ಎದ್ದಿಲ್ಲ, ಬಹುಶಃ ಅವಳಿಗೆ ಆರೋಗ್ಯ (Health) ಸರಿಯಿಲ್ಲ ಅಂತ ಅನಿಸುತ್ತೆ, ಅವಳನ್ನು ಎಬ್ಬಿಸಿ ಡಿಸ್ಟರ್ಬ್ (Disturb) ಮಾಡೋದು ಬೇಡ ಅಂದುಕೊಂಡ ಕಂದಮ್ಮ. ಅಮ್ಮ ಚೆನ್ನಾಗಿ ನಿದ್ದೆ (Sleep) ಮಾಡಲಿ ಅಂತ ಜೋಗುಳವನ್ನೂ ಹಾಡ್ತಿದ್ದ. ಆದ್ರೆ ಆ ಪುಟ್ಟ ಬಾಲಕನಿಗೇ ಏನು ಗೊತ್ತು, ನನ್ನ ಅಮ್ಮ ಮತ್ತೆ ಏಳುವುದಿಲ್ಲ ಅಂತ, ನನ್ನ ಅಮ್ಮ ಮತ್ತೆ ಮಾತನಾಡುವುದಿಲ್ಲ ಅಂತ, ನನ್ನ ಹಾಡು ಆಕೆ ಕೇಳುವುದಿಲ್ಲ ಅಂತ ಆತನಿಗೇನು ಗೊತ್ತು. ಬರೋಬ್ಬರಿ 4 ದಿನಗಳ ಕಾಲ ಅಮ್ಮನ ಶವದೊಂದಿಗೇ (Dead Body) ಬಾಲಕ (Boy) ಇದ್ದ!
ಅಮ್ಮನ ಶವದೊಂದಿಗೆ 4 ದಿನ ಇದ್ದ ಬಾಲಕ!
ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ಆಂಧ್ರ ಪ್ರದೇಶದ ತಿರಪತಿ ಸಮೀಪದ ವಿದ್ಯಾನಗರದಲ್ಲಿ. ಇಲ್ಲಿ 10 ವರ್ಷದ ಬಾಲಕ ತನ್ನ ತಾಯಿಯ ಮರಣದ ನಂತರ 4 ದಿನಗಳ ಕಾಲ ತಾಯಿಯ ಶವದ ಜೊತೆಗೆ ಇದ್ದಿದ್ದನಂತೆ. ಅವಳು ವಿಶ್ರಾಂತಿ ಪಡೆಯುತ್ತಿದ್ದಾಳೆ ಎಂದು ಭಾವಿಸಿ, 4 ದಿನ ತನ್ನ ಪಾಡಿಗೆ ತಾನು ಇದ್ದನಂತೆ. ನಾಲ್ಕು ದಿನದ ನಂತರ ಆಕೆಯ ಶವ ಕೊಳೆತು, ವಾಸನೆ ಬರೋದಕ್ಕೆ ಶುರುವಾಗಾದಲೇ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮಗನೊಂದಿಗೆ ಒಂಟಿಯಾಗಿ ಇದ್ದ ಮಹಿಳೆ
ಮೃತಳನ್ನು 50 ವರ್ಷದ ರಾಜಲಕ್ಷ್ಮೀ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಕೆಲವು ವರ್ಷಗಳ ಹಿಂದೆ ಪತಿಯಿಂದ ಡಿವೋರ್ಸ್ ಪಡೆದು, ಬೇರೆಯಾಗಿದ್ದರು. ಅವರಿಗೆ ಶ್ಯಾಮ್ ಕಿಶೋರ್ ಎಂಬ 10 ವರ್ಷದ ಮಗ ಇದ್ದ. ಇಬ್ಬರೂ ವಿದ್ಯಾನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಜಾರಿ ಬಿದ್ದು ಸಾವನ್ನಪ್ಪಿದ ತಾಯಿ
ಕಳೆದ 4 ದಿನಗಳ ಹಿಂದೆ ರಾಜಲಕ್ಷ್ಮೀ ಮನೆಯೊಳಗೆ ಕಾಲು ಜಾರಿ ಬಿದ್ದು, ತಲೆಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದಾರೆ. ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ವಿಚಿತ್ರವೆಂದರೆ ತನ್ನ ತಾಯಿ ರಕ್ತದ ಮಡುವಿನಲ್ಲಿ ಅಲುಗಾಡದೇ ಇದ್ದಾಗ, ಆಕೆಯ ಮಗ ಶ್ಯಾಮ್ ಕಿಶೋರ್ ತನ್ನ ತಾಯಿ ವಿಶ್ರಾಂತಿ ಪಡೆಯುತ್ತಿದ್ದಾಳೆ ಅಂತ ತಿಳಿದಿದ್ದನಂತೆ.
ವಿಶೇಷ ಚೇತನ ಬಾಲಕನಾಗಿರೋ ಶ್ಯಾಮ್ ಕಿಶೋರ್
ಇನ್ನೊಂದು ಆಘಾತಕಾರಿ ವಿಚಾರ ಅಂದ್ರೆ 10 ವರ್ಷದ ಬಾಲಕ ಶ್ಯಾಮ್ ಕಿಶೋರ್ ವಿಶೇಷ ಚೇತನನಾಗಿದ್ದ. ಆತನಿಗೆ ಬುದ್ಧಿ ಸರಿಯಿರದೇ ಇರುವುದರಿಂದ ತಾಯಿ ಏನು ಮಾಡುತ್ತಿದ್ದಾಳೆ ಅಂತ ತಿಳಿಯಲೇ ಇಲ್ಲ. ಹೀಗಾಗಿ ತಾಯಿ ಶವದೊಂದಿಗೆ ನಾಲ್ಕು ದಿನಗಳನ್ನು ಕಳೆದರು, ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆಂದು ಭಾವಿಸಿದರು. ಹಾಗೂ ಕಳೆದ ನಾಲ್ಕು ದಿನಗಳಿಂದ ಶ್ಯಾಮ್ ಕಿಶೋರ್ ಎಂದಿನಂತೆ ಶಾಲೆಗೆ ತೆರಳಿ ಮನೆಯಲ್ಲಿ ತಿಂಡಿ ತಿಂದು ಬದುಕುತ್ತಿದ್ದ.
ದುರ್ವಾಸನೆ ಬಂದ ಬಳಿಕ ಮಾವನಿಗೆ ಕರೆ
4 ದಿನಗಳ ಬಳಿಕ ಆಕೆಯ ಮೃತ ದೇಹ ಕೊಳೆಯಲು ಶುರುವಾಗಿದೆ. ಆಗ ಕೆಟ್ಟ ವಾಸನೆ ಬರುತ್ತಿದೆ. ಆಗ ಹೆದರಿದ ಬಾಲಕ ತನ್ನ ಮಾವ ದುರ್ಗಾ ಪ್ರಸಾದ್ ಎಂಬಾತನಿಗೆ ದೂರವಾಣಿ ಕರೆ ಮಾಡಿದ್ದಾನೆ. ನನ್ನ ಅಮ್ಮ ಮಲಗಿದ್ದವರು ಏಳಿಲ್ಲ ಮತ್ತು ತಾಯಿಯ ದೇಹದಿಂದ ದುರ್ವಾಸನೆ ಬರುತ್ತಿದೆ ಅಂತ ಮಾವನಿಗೆ ಹೇಳಿದ್ದಾನೆ.
ಮನೆಗೆ ಬಂದು ಭಯಾನಕ ದೃಶ್ಯ ನೋಡಿದ ಮಾವ
ಬಾಲಕನ ಮಾತು ಕೇಳಿ ಗಾಬರಿಯಾದ ಮಾವ ದುರ್ಗಾ ಪ್ರಸಾದ್, ತಂಗಿ ಮನೆಗೆ ದೌಡಾಯಿಸಿ ಬಂದಿದ್ದಾರೆ. ಆಗ ತಂಗಿ ಸತ್ತು, ಶವ ಕೊಳೆಯುತ್ತಿರುವುದು, ಆಕೆಯ ಮಗ ಶವದ ಬಳಿಯೇ ಕೂತಿರೋ ಭಯಾನಕ ದೃಶ್ಯ ನೋಡಿ, ಬೆಚ್ಚಿ ಬಿದ್ದಿದ್ದಾರೆ.
ತಕ್ಷಣ ಸ್ಥಳೀಯ ಪೊಲೀಸರಿಗೆ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಸ್ವಿಆರ್ಆರ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.